ಸಿನಿಮಾದಲ್ಲಿ ಎಲ್ಲರನ್ನು ಹೆಚ್ಚಾಗಿ ನಗಿಸುವಂತ ಈ ರಂಗಾಯಣ ರಘುನಿಜ ಜೀವನದಲ್ಲಿ ಹೇಗಿದ್ದಾರೆ ಗೊತ್ತೇ?

0

ಹೆಸರಲ್ಲೆ ರಂಗಾಯಣ ಎಂಬ ಹೆಸರನ್ನು ಹೊಂದಿರುವ ರಂಗಾಯಣ ರಘು ಅವರು ರಂಗಾಯಣದಿಂದ ತರಬೇತಿ ಪಡೆದ ಕಲಾವಿದರಲ್ಲಿ ಒಬ್ಬರು. ರಂಗಾಯಣ ರಘು ಅವರು ಯಾವ ಊರಿನವರು, ಅವರಿಗೆ ರಂಗಾಯಣ ಎಂಬ ಹೆಸರು ಹೇಗೆ ಬಂತು ಎಂಬೆಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಕಾಮಿಡಿ, ಪೋಷಕ ಮುಂತಾದ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ರಂಗಾಯಣ ರಘು ಅವರು ದೀರ್ಘಕಾಲದವರೆಗೆ ಚಿತ್ರರಂಗದಲ್ಲಿ ಬಹುಬೇಡಿಕೆಯ ಹಾಗೂ ದುಬಾರಿ ಪೋಷಕ ನಟರಾಗಿದ್ದರು. ರಂಗಾಯಣ ರಘು ಅವರು ತುಮಕೂರಿನ ಪಾವಗಡ ತಾಲೂಕಿನ ಕೊತ್ತೂರಿನ ಒಂದು ಸುಸ್ಥಿತಿ ಹಾಗೂ ಅವಿಭಕ್ತ ಕುಟುಂಬದಲ್ಲಿ ಎಪ್ರಿಲ್ 17, 1965 ರಂದು ಜನಿಸಿದರು. ಚಿಕ್ಕರಂಗಯ್ಯ ಹಾಗೂ ವೀರಮ್ಮ ದಂಪತಿಗಳ ಹತ್ತು ಮಕ್ಕಳಲ್ಲಿ ರಘು ಅವರು ಒಂಭತ್ತನೆಯವರು. ರಂಗಾಯಣ ರಘು ಅವರು ಚಿಕ್ಕ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡರು, ಒಂದುವರೆ ವರ್ಷದ ರಘು ಅವರನ್ನು ಚಿಕ್ಕಮ್ಮ ಮತ್ತು ಅಕ್ಕಂದಿರು ಸಾಕಿ ಸಲುಹಿದರು.

ಕೊತ್ತೂರಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರು. ಶಾಲೆಗಳಲ್ಲಿ ಓದಿಗಿಂತ ಕಲೆ, ನಟನೆಯಲ್ಲಿ ರಘು ಅವರಿಗೆ ಆಸಕ್ತಿ ಬೆಳೆಯಿತು. ಶಾಲೆಗಳಲ್ಲಿ ಏರ್ಪಡುವ ನಾಟಕ, ನೃತ್ಯಗಳಲ್ಲಿ ರಘು ಅವರು ಸಕ್ರೀಯವಾಗಿ ಭಾಗವಹಿಸುತ್ತಿದ್ದರು. ನಂತರ ಬೆಂಗಳೂರಿನ ಹೈಸ್ಕೂಲಿಗೆ ರಘು ಅವರನ್ನು ಸೇರಿಸಲಾಯಿತು ನಂತರದ ದಿನಗಳಲ್ಲಿ ನಾಟಕಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಓದಿನತ್ತ ಗಮನ ಹರಿಸಲಿಲ್ಲ. ಇದರಿಂದಾಗಿ 10ನೆ ಕ್ಲಾಸಿನಲ್ಲಿ ಫೇಲ್ ಆಗುತ್ತಾರೆ ನಂತರ ಮನೆಯಲ್ಲಿದ್ದ ಕುರಿಗಳು, ದನಗಳ ಪಾಲನೆಯಲ್ಲಿ ತೊಡಗಿದರು ಬಿಡುವಿನ ಸಮಯದಲ್ಲಿ ಸ್ನೇಹಿತರೊಂದಿಗೆ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಮನೆಯವರ ಒತ್ತಾಯದ ಮೇರೆಗೆ ಪುನಃ ಪರೀಕ್ಷೆ ಕಟ್ಟಿ ಪಾಸ್ ಆಗುತ್ತಾರೆ. ನಂತರ ಬೆಂಗಳೂರಿನ ಕಾಲೇಜೊಂದಕ್ಕೆ ಸೇರಿಸುತ್ತಾರೆ. ರಘು ಅವರು ತಾವೆ ಸ್ಕ್ರಿಪ್ಟ್ ಬರೆಯುತ್ತಿದ್ದರು ಅಲ್ಲದೆ ಸ್ತ್ರಿ ಪಾತ್ರಗಳಲ್ಲಿ ನಟಿಸುತ್ತಿದ್ದರು. ನಾಟಕಗಳಲ್ಲಿ ಅಭಿನಯಿಸಿ ಅನೇಕ ಅವಾರ್ಡ್ ಗಳನ್ನು ಪಡೆಯುತ್ತಿದ್ದರು. ರಘು ಅವರ ಪದವಿ ಮುಗಿಯುವ ಸಮಯದಲ್ಲಿ ಕಾಲೇಜಿನಲ್ಲಿ ಸಾಕಷ್ಟು ಜನರೊಂದಿಗೆ ಸ್ನೇಹ ಬೆಳೆಯಿತು. ರಾಜಶೇಖರ್ ಕಂಬಾರ್ ಅವರೊಂದಿಗೆ ಸ್ನೇಹವಾಯಿತು ನಂತರ ಅವರಿಬ್ಬರು ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ರಾಜಶೇಖರ್ ಕಂಬಾರ್ ಅವರು ತಮ್ಮ ತಂದೆಯವರಾದ ಶ್ರೀಧರ್ ಕಂಬಾರ್ ಅವರಿಗೆ ರಘು ಅವರನ್ನು ಪರಿಚಯಿಸಿದರು. ಶ್ರೀಧರ್ ಕಂಬಾರ್ ಅವರು ಮೈಸೂರಿನ ಖ್ಯಾತ ನಾಟಕ ಮಂಡಳಿ ರಂಗಾಯಣಕ್ಕೆ ರಘು ಅವರನ್ನು ಕಳುಹಿಸಿದರು. ಈ ಸಮಯದಲ್ಲಿ ರಘು ಅವರ ತಂದೆ ವಿಧಿವಶರಾದರು.

ರಂಗಾಯಣವೆಂಬ ನಾಟಕ ಶಾಲೆಯಲ್ಲಿ ಕೇವಲ ನಾಟಕ ಅಭ್ಯಾಸವಲ್ಲದೆ ಜೀವನದಲ್ಲಿ ಬೇಕಾಗುವ ಶಿಸ್ತು, ಓದು, ನಡೆ-ನುಡಿ, ಯೋಗ, ಕರಾಟೆ ಮುಂತಾದವುಗಳನ್ನು ಕಲಿಸುತ್ತಾರೆ. ರಂಗಾಯಣದಲ್ಲಿ ಬಿವಿ ಕಾರಂತ್ ಅವರು ಗುರುಗಳಾಗಿದ್ದರು ಅವರೊಂದಿಗೆ ಮಂಡ್ಯ ರಮೇಶ, ಅರುಣ್ ಸಾಗರ್ ಮೊದಲಾದ ಕಲಾವಿದರಿದ್ದರು. ಸುಮಾರು 11 ವರ್ಷಗಳ ರಂಗಾಯಣ ಜೀವನ ರಘು ಅವರಿಗೆ ರಂಗಾಯಣ ರಘು ಎಂಬ ಹೆಸರನ್ನು ನೀಡಿತು. ರಂಗಾಯಣ ರಘು ಅವರು ಸುಗ್ಗಿ ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದರು ಆದರೆ ಕಾರಣಾಂತರಗಳಿಂದ ಚಿತ್ರ ಬಿಡುಗಡೆಯಾಗಲಿಲ್ಲ. ನಂತರ ಭೂಮಿಗೀತ ಎಂಬ ಸಿನಿಮಾದಲ್ಲಿ ನಟಿಸಿದರು ಆದರೆ ಇದು ಯಶಸ್ಸನ್ನು ಗಳಿಸಲಿಲ್ಲ. ನಂತರ ರಘು ಅವರು ಮನಮೆಚ್ಚುವಂತ ಪಾತ್ರದಲ್ಲಿ ನಟಿಸಬೇಕು ಎಂಬ ಹಠವನ್ನು ಹೊಂದಿದ್ದರು. ನಂತರ ಭೂಮಿತಾಯಿಯ ಚೊಚ್ಚಲ ಮಗ ಎಂಬ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದರು. ನಂತರ ಧಮ್, ಶ್ರೀರಾಮ, ಹೃದಯವಂತ, ರಂಗ SSLC, ದುನಿಯಾ ಮೊದಲಾದ ಸಿನಿಮಾಗಳಲ್ಲಿ ರಂಗಾಯಣ ರಘು ಅವರು ಖಳ ನಟನಾಗಿ, ಪೋಷಕ ನಟನಾಗಿ ನಟಿಸಿದರು. ಅವರ ನಟನೆಗೆ ಕರ್ನಾಟಕ ಸ್ಟೇಟ್ ಫಿಲ್ಮ್ ಅವಾರ್ಡ್, ಫಿಲ್ಮ್ ಫೇರ್ ಅವಾರ್ಡ್ ಪಡೆದರು. ಅವರು ಸುಮಾರು 300 ಚಿತ್ರಗಳಲ್ಲಿ ನಟಿಸಿದ್ದಾರೆ. ರಘು ಅವರ ಧರ್ಮಪತ್ನಿ ಮಂಗಳ ಅವರು ಮಕ್ಕಳ ನಾಟಕಗಳ ಟೀಚರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ದಂಪತಿಗಳು ಸಂಚಾರಿ ಥಿಯೇಟರ್ ಮಕ್ಕಳ ಟ್ರೈನಿಂಗ್ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ರಘು ಅವರು ತುಳು ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ರಂಗಾಯಣ ರಘು ಅವರು ಹೆಚ್ಚಿನ ಸಿನಿಮಾಗಳಲ್ಲಿ ನಟಿಸಲಿ ಎಂದು ಆಶಿಸೋಣ.

Leave A Reply

Your email address will not be published.

error: Content is protected !!