ವೃಷಭ ರಾಶಿಯವರ ಲೈಫ್ ಟೈಮ್ ಭವಿಷ್ಯ ಇಲ್ಲಿದೆ

0

ಈ ದಿನದ ಲೇಖನದಲ್ಲಿ ವೃಷಭ ರಾಶಿಯವರ ಬಗ್ಗೆ ತಿಳಿಸಿಕೊಡಲಾಗುವುದು. ವೃಷಭ ರಾಶಿಯವರ ಸಾಮರ್ಥ್ಯ, ದೌರ್ಬಲ್ಯ ಏನು ಎಂಬುದನ್ನು ಕೂಡ ವಿಸ್ತೃತವಾಗಿ ತಿಳಿಸಲಾಗುವುದು. ಕೃತ್ತಿಕಾ ನಕ್ಷತ್ರದ 2, 3 ಹಾಗೂ 4ನೇ ಪಾದ, ರೋಹಿಣಿ ನಕ್ಷತ್ರದ 1, 2, 3 ಹಾಗೂ 4ನೇ ಪಾದ ಮತ್ತು ಮೃಗಶಿರಾ 1, 2ನೇ ಪಾದ ಸೇರಿ ವೃಷಭ ರಾಶಿ ಆಗುತ್ತದೆ. ವೃಷಭ ರಾಶಿಯ ಅಧಿಪತಿ ಶುಕ್ರ ಗ್ರಹ.

ಈ ರಾಶಿಯವರಿಗೆ ಶುಕ್ರ ಅಧಿಪತಿ ಆಗಿರುವುದು ಪ್ಲಸ್ ಪಾಯಿಂಟ್. ಪಿತ್ರಾರ್ಜಿತ ಆಸ್ತಿ ವಿಚಾರವಾಗಿಯೇ ಹಲವರಿಗೆ ಜಗಳ ಆಗುತ್ತದೆ. ಹಾಗೆ ಜಗಳ ಆಗಿಯೂ ಆಸ್ತಿ ದೊರೆಯುವ ಖಾತ್ರಿ ಇರುವುದಿಲ್ಲ. ಆದರೆ ವೃಷಭ ರಾಶಿಯವರಿಗೆ ಪಿತ್ರಾರ್ಜಿತ ಆಸ್ತಿ ಸಂಪೂರ್ಣವಾಗಿ ದೊರೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಬಿಳಿ ಹಾಗೂ ನೀಲಿ ಬಣ್ಣ ಅತ್ಯಂತ ಪ್ರಿಯವಾಗಿರುತ್ತದೆ. ಅವುಗಳನ್ನು ಅನುಕೂಲಕರ ಬಣ್ಣಗಳು ಅಂತ ಕೂಡ ಪರಿಗಣಿಸಬಹುದು. ಶುಕ್ರವಾರ ಅದ್ಭುತವಾದ ಫಲ ಕೊಡುವಂಥ ವಾರವಾಗಿರುತ್ತದೆ.

ಮಹಾಲಕ್ಷ್ಮೀ ಆರಾಧನೆ ಮಾಡಿದರೆ ಎಲ್ಲದರಲ್ಲೂ ಯಶಸ್ಸನ್ನು ಪಡೆಯಬಹುದು. 6 ಹಾಗೂ 8 ವೃಷಭ ರಾಶಿಯವರ ಪಾಲಿನ ಶುಭ ಸಂಖ್ಯೆಗಳು. 6, 15 ಹಾಗೂ 24 ಶುಭ ದಿನಾಂಕಗಳು. ಕೃತ್ತಿಕಾ ನಕ್ಷತ್ರಕ್ಕೆ ರವಿ, ರೋಹಿಣಿಗೆ ಚಂದ್ರ ಹಾಗೂ ಮೃಗಶಿರಾ ನಕ್ಷತ್ರಕ್ಕೆ ಕುಜ ಅಧಿಪತಿಯಾಗಿರುತ್ತಾನೆ. ಶುಭ ಫಲ ನೀಡುವ ರತ್ನ ಯಾವುದು ಅಂತ ನೋಡುವುದಾದರೆ, ಕೆಲವರಿಗೆ ವಜ್ರ, ಮತ್ತು ಕೆಲವರಿಗೆ ನೀಲ, ಕೆಲ ಮಂದಿಗೆ ಪಚ್ಚೆ ಶುಭ ಫಲಗಳನ್ನು ನೀಡುತ್ತವೆ. ವೃಷಭವು ಸ್ತ್ರೀ ರಾಶಿ ಆಗಿದ್ದು, ಭೂ ತತ್ವ ಹಾಗೂ ರಜೋ ಗುಣ ಇರುವಂಥದ್ದಾಗಿದೆ.

ಈ ರಾಶಿಯವರಿಗೆ ರವಿ ಶತ್ರು. ಜತೆಗೆ ಕ್ಷೀಣ ಚಂದ್ರ ಅಥವಾ ಕೃಷ್ಣ ಪಕ್ಷದ ಚಂದ್ರ ಅಥವಾ ಜಾತಕದಲ್ಲಿ ಚಂದ್ರ ದುರ್ಬಲನಾದರೆ ಬಹಳ ಸಮಸ್ಯೆಗಳನ್ನು ಎದುರಿಸುತ್ತಾರೆ. ಬುಧ ಹಾಗೂ ಶನಿ ಗ್ರಹಗಳು ಮಿತ್ರರಾಗುತ್ತಾರೆ. ಕುಜ ಹಾಗೂ ಗುರು ಸಮಬಲರು. ಇಲ್ಲಿ ನೆನಪಿಡಬೇಕಾದ ವಿಚಾರವೊಂದಿದೆ. ಜನ್ಮ ಜಾತಕದಲ್ಲಿ ಯಾರಿಗೆ ಶುಕ್ರನು ನೀಚ ಕ್ಷೇತ್ರವಾದ ಕನ್ಯಾ ರಾಶಿಯಲ್ಲಿ ಇರುತ್ತಾನೋ ಅಂಥವರಿಗೆ ಅದೃಷ್ಟ ಕಡಿಮೆ. ಆದರೆ ಅದೇ ಶುಕ್ರ ಮೀನ ರಾಶಿಯಲ್ಲಿದ್ದರೆ ಉಚ್ಚ ಸ್ಥಾನವಾಗುತ್ತದೆ. ಅದ್ಭುತವಾದ ಫಲಗಳು ದೊರೆಯುತ್ತವೆ. ಯಾರಿಗೆ ಜನ್ಮ ಜಾತಕದಲ್ಲಿ ಶುಕ್ರ ನೀಚನಾಗಿರುತ್ತಾನೋ ಅಂಥವರ ಸಂಗಾತಿ ಜಾತಕದಲ್ಲಿ ಉಚ್ಚ ಶುಕ್ರನಿದ್ದರೆ ದೋಷ ಸ್ವಲ್ಪ ಮಟ್ಟಿಗೆ ನಿವಾರಣೆ ಆಗುತ್ತದೆ.

ವೃಷಭ ರಾಶಿಯವರಿಗೆ ವಿದ್ಯೆ ಹೇಗಿರುತ್ತದೆ ಅಂತ ನೋಡುವುದಾದರೆ ಎರಡು, ನಾಲ್ಕು ಮತ್ತು ಐದನೇ ಸ್ಥಾನವನ್ನು ಪರಿಶೀಲನೆ ಮಾಡುವ ಮೂಲಕ ತಿಳಿದುಕೊಳ್ಳಬಹುದು. ವಿಜ್ಞಾನದ ವಿಷಯಗಳ ಬಗ್ಗೆ ವೃಷಭ ರಾಶಿಯವರಿಗೆ ಬಹಳ ಹುಚ್ಚಿರುತ್ತದೆ. ಫೋಟೋಗ್ರಫಿಯಲ್ಲಿ ಆಸಕ್ತಿ ಹೆಚ್ಚಾಗಿತ್ತದೆ. ಅಂದದ ಆರಾಧಕರಾಗಿರುತ್ತಾರೆ. ಆರ್ಕಿಟೆಕ್ಚರ್ ಮಾಡುವವರಲ್ಲಿ ಈ ರಾಶಿಯವರು ಹೆಚ್ಚಾಗಿರುತ್ತಾರೆ. ಸಂಗೀತ ಹಾಗೂ ವಿವಿಧ ಕಲೆಗಳಲ್ಲಿ ಆಸಕ್ತಿ ಇರುತ್ತದೆ. ಈ ರಾಶಿಯವರು ಯಶಸ್ವಿ ವಿಜ್ಞಾನಿಗಳಾಗಬಹುದು.

ಬಾಹ್ಯಾಕಾಶಕ್ಕೆ ಸಂಬಂಧಿಸಿದ ವಿಜ್ಞಾನ ಇವರಿಗೆ ಸುಲಭಕ್ಕೆ ಅರ್ಥ ಆಗುತ್ತದೆ. ಕಫ ಪ್ರಕೃತಿಯವರಾದ ಇವರಿಗೆ ಆರೋಗ್ಯದಲ್ಲಿ ಏರಿಳಿತ ಜಾಸ್ತಿ. ವಿಜ್ಞಾನಕ್ಕೆ ಸಂಬಂಧಿಸಿದ ವಿಷಯವನ್ನು ವ್ಯಾಸಂಗ ಮಾಡಿದರೆ ಉನ್ನತ ಮಟ್ಟದಲ್ಲಿ ಜ್ಞಾನವಂತರಾಗುತ್ತಾರೆ. ಪಾಪ ಕರ್ತರಿ ಯೊಗವಿದ್ದರೆ ಅದೃಷ್ಟಹೀನರು ಇನ್ನು ಶುಕ್ರ ಅಂದರೆ ಮದುವೆಗೆ ಸಂಬಂಧಿಸಿದ ಗ್ರಹ. ಈ ರಾಶಿಯವರಿಗೆ ಮದುವೆ ವಿಚಾರದಲ್ಲಿ ಅಥವಾ ಸಮಯದಲ್ಲಿ ತೊಂದರೆಗಳು ಬಂದಲ್ಲಿ ಅದು ಬೇರೆ ಗ್ರಹಗಳಿಂದ ಬರಬಹುದೇ ಹೊರತು ಶುಕ್ರನಿಂದ ಯಾವುದೇ ತೊಂದರೆ ಆಗುವುದಿಲ್ಲ.

ಶೇಕಡಾ ತೊಂಬತ್ತೈದರಷ್ಟು ಮಂದಿಗೆ ಮದುವೆ ವಿಚಾರದಲ್ಲಿ ಸಮಸ್ಯೆ ಆಗುವುದಿಲ್ಲ. ಇನ್ನು ಶೇಕಡಾ ಐದರಷ್ಟು ಯಾರಿಗೆ ಜಾತಕದಲ್ಲಿ ತೀರಾ ಕೆಟ್ಟ ದೋಷ ಹಾಗೂ ಯೋಗಗಳು ಇರುತ್ತವೋ ಅಂಥವರಿಗೆ ತೊಂದರೆ ಆಗುತ್ತದೆ. ಜನ್ಮ ಜಾತಕದಲ್ಲಿ ಶುಕ್ರ ಮಿತ್ರ ಸ್ಥಾನದಲ್ಲಿ ಇದ್ದರೆ ದಾಂಪತ್ಯ ಸೌಖ್ಯ ತುಂಬ ಚೆನ್ನಾಗಿರುತ್ತದೆ. ಮಿತ್ರ ಸ್ಥಾನ ಅಂದರೆ ಮಕರ ಹಾಗೂ ಕುಂಭ ರಾಶಿಗಳು. ಇನ್ನು ಉಚ್ಚ ಸ್ಥಾನವಾದ ಮೀನ ರಾಶಿಯಲ್ಲಿ ಇದ್ದರೂ ಉತ್ತಮವಾದ ದಾಂಪತ್ಯ ಸೌಖ್ಯ ದೊರೆಯುತ್ತದೆ. ಶತ್ರು ಸ್ಥಾನ ಅಥವಾ ಪಾಪ ಗ್ರಹ ಜತೆ ಇದ್ದರೆ ವಿವಾಹದಲ್ಲಿ ಸಮಸ್ಯೆಗಳಾಗುತ್ತವೆ. ಪಾಪ ಕರ್ತರಿ ಎಂಬ ಯೋಗವಿದೆ. ಜಾತಕದಲ್ಲಿ ಈ ಯೋಗವಿದ್ದರೆ ವೃಷಭ ರಾಶಿಯವರು ಅದೃಷ್ಟಹೀನರಾಗುತ್ತಾರೆ.

ವೃಷಭ ರಾಶಿಯವರಿಗೆ ಜಾತಕದಲ್ಲಿ ಕುಜ ಉತ್ತಮ ಸ್ಥಾನದಲ್ಲಿದ್ದರೆ ಅದರಿಂದ ಮತ್ತಷ್ಟು ಒಳ್ಳೆ ಫಲಗಳನ್ನು ಹೇಳಬಹುದು. ಏಕೆಂದರೆ, ಮೃಗಶಿರಾ ನಕ್ಷತ್ರದ ಮೂರು ಹಾಗೂ ನಾಲ್ಕನೇ ಪಾದ ಕೂಡ ವೃಷಭ ರಾಶಿಗೇ ಬರುವುದರಿಂದ ಅದರಿಂದ ಅನುಕೂಲ ಆಗುತ್ತದೆ. ಭೂಮಿ, ಆಸ್ತಿಯನ್ನು ಮಾಡುತ್ತೀರಿ. ರೈತರಿಗೆ ಒಳ್ಳೆ ಫಲ ಇರುತ್ತದೆ. ಸೊಗಸಾದ ಮನೆ ಕಟ್ಟುವ ಶಕ್ತಿ ಇರುತ್ತದೆ. ಈಗಾಗಲೇ ಹೇಳಿದಂತೆ ಶುಕ್ರ ಗ್ರಹ ಜನ್ಮ ಜಾತಕದಲ್ಲಿ ನೀಚನಾಗಿದ್ದರೆ

(ಕನ್ಯಾ ರಾಶಿಯಲ್ಲಿ ಸ್ಥಿತನಾಗಿದ್ದರೆ ನೀಚ) ಅಥವಾ ರಾಹು-ಕೇತು ಗ್ರಹಗಳ ಜತೆಗೆ ಇದ್ದಲ್ಲಿ ಅಂಥ ಸಂದರ್ಭದಲ್ಲಿ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಾಗುತ್ತವೆ. ಯಾರಿಗೆ ತುಲಾ ಅಥವಾ ವೃಶ್ಚಿಕ ರಾಶಿಯಲ್ಲಿ ಶುಕ್ರ ಇದ್ದರೆ ಲೈಂಗಿಕ ವ್ಯಾಧಿಗಳು ಕಾಣಿಸಿಕೊಳ್ಳಬಹುದು. ರಕ್ತದೊತ್ತಡ, ಮಧುಮೇಹ ಹಾಗೂ ಕಿಡ್ನಿ ಸಮಸ್ಯೆಗಳು ಇವರಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ವೃಷಭ ರಾಶಿಯ ಸ್ತ್ರೀಯರಿಗೆ ಗರ್ಭಕೋಶದ ಸಮಸ್ಯೆಗಳಾಗಬಹುದು ಮುಂಜಾಗ್ರತೆ ತೆಗೆದುಕೊಳ್ಳಬೇಕು ವೃಷಭ ರಾಶಿಯವರು ಆಸ್ತಿವಂತರಾಗುತ್ತಾರೆ.

ಶುಕ್ರ ದಶೆ ಇದ್ದಾಗ, ಶುಕ್ರ ಒಳ್ಳೆ ಸ್ಥಾನಕ್ಕೆ ಬಂದಾಗ ಅತ್ಯುತ್ತಮ ಫಲ ದೊರೆಯುತ್ತದೆ. ಅಂದವಾದ ಮನೆಯನ್ನು ಕಟ್ಟುವ ಯೋಗ ನಿಮ್ಮದಾಗುತ್ತದೆ. ಯಾರಿಗೆಜನ್ಮ ಜಾತಕದಲ್ಲಿ ಮಕರ, ಕುಂಭ ಅಥವಾ ಮೇಷ, ವೃಶ್ಚಿಕದಲ್ಲಿ ಶುಕ್ರ ಇದ್ದರೆ ಅಂಥವರು ಯಾವುದಾದರೂ ಒಂದು ವಾದ್ಯವನ್ನು ಕಲಿಯುತ್ತಾರೆ. ಅದರಲ್ಲಿ ಸಾಧನೆಯನ್ನು ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ವೃಷಭ ರಾಶಿಯವರಿಗೆ ದರ್ಪ, ದಾರ್ಷ್ಟ್ಯತೆ ಹೆಚ್ಚಾಗಿರುತ್ತದೆ. ನಾನು-ನನ್ನದು ಎಂಬ ಮನೋಭಾವ ಇರುತ್ತದೆ.

ಸ್ವಾರ್ಥದ ಗುಣ ಕೂಡ ಇರುತ್ತದೆ. ಇವೆಲ್ಲದರ ಜತೆಗೆ ಜಾತಕದಲ್ಲಿ ಯಾವ ಯೋಗಗಳಿವೆ ಎಂಬುದನ್ನು ಪರಿಶೀಲಿಸಿಕೊಳ್ಳಿ. ಯೋಗ ಇದ್ದರೆ, ಆ ನಿರ್ದಿಷ್ಟ ಯೋಗದ ಸಮಯದಲ್ಲಿ ಒಳ್ಳೆ ಕೆಲಸಗಳನ್ನು ಕೈಗೆತ್ತಿಕೊಳ್ಳಿ. ದೋಷಗಳಿದ್ದರೆ ಅವುಗಳನ್ನು ನಿವಾರಿಸಿಕೊಂಡು ಮುಂದುವರಿಯಿರಿ. ಕೃತ್ತಿಕಾ, ರೋಹಿಣಿ ಹಾಗೂ ಮೃಗಶಿರಾ ಈ ಮೂರೂ ನಕ್ಷತ್ರದವರು ಸಹ ಪರಿಹರಿಸಿಕೊಳ್ಳಲೇ ಬೇಕಾದ ಅಥವಾ ಮಾಡಿಸಿಕೊಳ್ಳಲೇ ಬೇಕಾದ ಶಾಂತಿ-ಪರಿಹಾರಗಳಿವೆ ಯಾವುದೇ ಜಾತಕದವರಿಗೆ ಕುಜ-ರಾಹು ಸಂಧಿ ಶಾಂತಿ, ರಾಹು- ಬೃಹಸ್ಪತಿ ಸಂಧಿ ಶಾಂತಿ ಹಾಗೂ ಶುಕ್ರಾದಿತ್ಯ ಶಾಂತಿ ಎಂಬುದನ್ನು ಮಾಡಿಸಿಕೊಳ್ಳಬೇಕಾಗುತ್ತದೆ.

ಅದು ಯಾವಾಗೆಂದರೆ ಜಾತಕರಿಗೆ ಕುಜ ದಶೆ ಪೂರ್ಣವಾಗಿ ರಾಹು ದಶೆ ಆರಂಭವಾಗುವ ದಿನದ ಅರು ತಿಂಗಳ ಮುಂಚೆ ಸಂಧಿ ಶಾಂತಿಯನ್ನು ಮಾಡಿಸಿಕೊಳ್ಳಲೇಬೇಕು. ಅದೇ ರೀತಿಯಲ್ಲಿ ರಾಹು ದಶೆ ಮುಗಿದು ಗುರು ದಶೆ ಆರಂಭಕ್ಕೆ ಆರು ತಿಂಗಳ ಮುನ್ನ ಹಾಗೂ ಶುಕ್ರ ದಶೆ ಪೂರ್ಣವಾಗಿ ರವಿ ದಶೆ ಶುರುವಾಗುವ ಆರು ತಿಂಗಳ ಮುಂಚೆ ಸಂಧಿ ಶಾಂತಿಯನ್ನು ಮಾಡಿಸಲೇ ಬೇಕು. ಒಂದು ವೇಳೆ ಮಾಡಿಸದಿದ್ದರೆ ಏನಾಗುತ್ತದೆ ರಾಹು ದಶೆಯಲ್ಲಿ ವಿದ್ಯಾ ನಾಶ, ಅವಮಾನ, ಬುದ್ಧಿ ನಾಶ, ಅವಮರ್ಯಾದೆ, ಮನೆಯಲ್ಲಿ ಹಿರಿಯರ ಅನಾರೋಗ್ಯ-ಸಾವು ಇತ್ಯಾದಿ ಸಮಸ್ಯೆಗಳಾಗುತ್ತದೆ.

ಇನ್ನು ರಾಹು-ಬೃಹಸ್ಪತಿ ಸಂಧಿ ವೇಳೆಯಲ್ಲಿ ಅನಾರೋಗ್ಯ ಸಮಸ್ಯೆಗಳಾಗಿ ಶಸ್ತ್ರ ಚಿಕಿತ್ಸೆ ಆಗಬಹುದು. ಬಂಗಾರದಂಥ ಕೆಲಸ ಏನೋ ಸಮಸ್ಯೆಯಾಗಿ ಬಿಡುವಂತಾಗುತ್ತದೆ. ಶುಕ್ರಾದಿತ್ಯ ಸಂಧಿ ಕಾಲದಲ್ಲಿ ಸಂಪತ್ತು ನಾಶ, ವ್ಯಾಪಾರ ನಷ್ಟ, ವೈವಾಹಿಕ ಸಮಸ್ಯೆಗಳು ಇತ್ಯಾದಿ ತೊಂದರೆಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತವೆ. ಆದ್ದರಿಂದ ಜಾತಕವನ್ನು ಕಡ್ಡಾಯವಾಗಿ ತೋರಿಸಿ ಪರಿಹಾರ ಮಾಡಿಸಿಕೊಂಡರೆ ಭವಿಷ್ಯ ಉಜ್ವಲವಾಗಿರುತ್ತದೆ.

Leave A Reply

Your email address will not be published.

error: Content is protected !!