ತಿಮ್ಮಪ್ಪ ಕುಬೇರನಲ್ಲಿ ಸಾಲ ಮಾಡಿದ್ದು ಯಾಕೆ ?

0

ದಕ್ಷಿಣಭಾರತದಲ್ಲಿರುವ ಪ್ರತಿಯೊಂದು ದೇವಾಲಯ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಅವುಗಳಲ್ಲಿ ನಮ್ಮ ಕರ್ನಾಟಕದ ನೆರೆಯ ರಾಜ್ಯವಾದ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ ಬಳಿಯ ತಿರುಮಲ ಬೆಟ್ಟದ ಮೇಲೆ ನೆಲೆಸಿ ಭಕ್ತರ ಉದ್ಧಾರ ಮಾಡುತ್ತಿರುವ ದಯಾಮಯಿ, ಕಲಿಯುಗದ ಪ್ರತ್ಯಕ್ಷ ದೈವ ತಿರುಪತಿ ತಿಮ್ಮಪ್ಪ. ಇದು ಅತಿ ಪ್ರಾಚೀನ ದೇವಾಲಯವಾಗಿದ್ದು ಕೇರಳದ ಪದ್ಮನಾಭ ಸ್ವಾಮಿ ದೇವಾಲಯದ ನಂತರ ಭಾರತದಲ್ಲೇ ಎರಡನೇ ಶ್ರೀಮಂತ ದೇವಾಲಯವಾಗಿದೆ.

ಪ್ರಪಂಚದಲ್ಲೇ ಅತಿಹೆಚ್ಚು ಭಕ್ತಾದಿಗಳು ಭೇಟಿ ನೀಡುವ ಯಾತ್ರಾಸ್ಥಳ. ಇಲ್ಲಿ ಶ್ರೀದೇವಿ ಭೂದೇವಿ ಸಮೇತರಾಗಿ ಶ್ರೀ ವೆಂಕಟೇಶ್ವರ ಸ್ವಾಮಿ ನೆಲೆಸಿದ್ದಾನೆ. ಶ್ರೀ ಕ್ಷೇತ್ರದಲ್ಲಿ ನೆಲೆಸಿರುವ ತಿರುಪತಿ ತಿಮ್ಮಪ್ಪ ಸಾಲಗಾರ ಎಂದು ಹೇಳಲಾಗುತ್ತದೆ. ತಿಮ್ಮಪ್ಪ ಸಾಲಗಾರನಾಗಲು ಕಾರಣವೇನು? ಆತನಿಗೆ ಸಾಲ ನೀಡಿದವರಾರು? ಏಳು ಬೆಟ್ಟಗಳ ಒಡೆಯ ತಿಮ್ಮಪ್ಪ ಮಾಡಿದ ಸಾಲವೇಷ್ಟು? ಈ ಸಾಲದ ಋಣ ಸಂದಾಯವಾಗಲು ಎಷ್ಟು ಸಮಯ ಬೇಕು? ಅಷ್ಟಕ್ಕೂ ಲಕ್ಷ್ಮೀಪತಿ ಸಾಲ ಮಾಡಿದ್ದು ಯಾವ ಕಾರಣಕ್ಕೆ, ಅದರ ಹಿನ್ನಲೆ ಏನು ಎಂದು ಈ ಪುರಾಣಗಳಲ್ಲಿ ಹೇಳಿರುವ ಹಾಗೂ ನಾವು ಕೇಳುತ್ತಾ ಬಂದಿರುವ ಕಥೆಯನ್ನೇ ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸಲಾಗಿದೆ.

ಹಿಂದೂ ಪುರಾಣಗಳ ಪ್ರಕಾರ ಭಗವಾನ್ ವೆಂಕಟೇಶ್ವರನನ್ನು ವಿಷ್ಣುವಿನ ಪವಿತ್ರ ಅವತಾರ ಎಂದು ಹೇಳಲಾಗುತ್ತದೆ. ವರಹ ಪುರಾಣ ಮತ್ತು ಭವಿಷ್ಯ ಪುರಾಣಗಳ ಪ್ರಕಾರ ಮಾನವ ಅವತಾರದಲ್ಲಿ ಜನಿಸಿದ ವಿಷ್ಣುವು ವೆಂಕಟೇಶ್ವರನಾಗಿ ಲಕ್ಷ್ಮಿಯನ್ನು ಹುಡುಕಿ ಹೊರಡುತ್ತಾನೆ. ಅಂದು ಲಕ್ಷ್ಮಿಯನ್ನು ಹುಡುಕಿ ಹೊರಟ ವೆಂಕಟೇಶ್ವರನನ್ನೇ ನಾವಿಂದು ತಿರುಪತಿಯಲ್ಲಿ ನೋಡಬಹುದು. ವೆಂಕಟೇಶ್ವರ ಎಂದರೆ ವೆಂಕಟಗಳ ಅಧಿಪತಿ. ಅದರ ಅರ್ಥ ಭಗವಾನ್ ವೆಂಕಟೇಶ್ವರನು ನಮ್ಮ ಪಾಪಗಳನ್ನು ನಿವಾರಿಸುತ್ತಾನೆ. ವೆಂಕಟೇಶ್ವರ ಎನ್ನುವ ಪದಕ್ಕೆ ಇನ್ನೂ ಒಂದು ಅರ್ಥವಿದೆ. ವೆಂಕಟ ಗಿರಿ ಎನ್ನುವುದು ಆಂಧ್ರಪ್ರದೇಶದಲ್ಲಿರುವ ಒಂದು ಬೆಟ್ಟ.

ಈಶ್ವರ ಎಂದರೆ ಒಡೆಯ. ಈ ಬೆಟ್ಟಗಳ ಒಡೆಯನೇ ವೆಂಕಟೇಶ್ವರ ಎಂದು ಹೇಳುವುದುಂಟು. ಇನ್ನು ತಿರುಪತಿ ತಿಮ್ಮಪ್ಪನ ದೇವಸ್ಥಾನದ ಟ್ರಸ್ಟಿನ ಖಾತೆಯಲ್ಲಿ ಬರೋಬ್ಬರಿ 50 ಸಾವಿರ ಕೋಟಿ ಹಾಗೆ ಇದೆ, ಆದರೆ ತಿರುಪತಿ ತಿಮ್ಮಪ್ಪ ಮಾತ್ರ ಇನ್ನು ಸಾಲದ ಸುಳಿಯಲ್ಲಿ ಇದ್ದಾನೆ ಮತ್ತು ಅದೂ ಅಂತಿಂತ ಸಾಲ ಅಲ್ಲ ಇಡೀ ಕಲಿಯುಗ ಮುಗಿದರು ಕೂಡ ತೀರಿಸಲಾಗದ ಸಾಲ ಅದಾಗಿದೆ. ತನ್ನ ಭಕ್ತರ ಬಯಕೆಯನ್ನ ಈಡೇರಿಯುವ ತಿಮ್ಮಪ್ಪ ಇನ್ನು ತನ್ನ ಸಾಲವನ್ನ ಯಾಕೆ ತೀರಿಸಿಲ್ಲ ಅಂತ ನೀವು ಅಂದುಕೊಳ್ಳಬಹುದು, ಇನ್ನು ತಿಮ್ಮಪ್ಪನ ಸಾಲದ ಬಗ್ಗೆ ಒಂದು ಪೌರಾಣಿಕ ಮತ್ತು ಧಾರ್ಮಿಕ ಆಧಾರ ಕೂಡ ಇದೆ.

ಪುರಾಣದ ಪ್ರಕಾರ ತಿಮ್ಮಪ್ಪ ಕುಬೇರನ ಸಾಲಗಾರನಾಗಿದ್ದಾನೆ ಮತ್ತು ಕಲಿಯುಗದ ಅಂತ್ಯದ ತನಕ ತಿಮ್ಮಪ್ಪ ಆ ಕುಬೇರನ ಸಾಲವನ್ನ ತೀರಿಸಬೇಕಾಗಿದೆ ಎಂದು ಪುರಾಣ ಹೇಳುತ್ತಿದೆ. ಪುರಾಣದ ಪ್ರಕಾರ ಒಂದು ದಿನ ವಿಷ್ಣುದೇವ ತನ್ನ ಪತ್ನಿ ಲಕ್ಷ್ಮಿ ದೇವಿ ಜೊತೆ ವೈಕುಂಠದಲ್ಲಿ ನಿದ್ರೆ ಮಾಡುತ್ತಿರುತ್ತಾರೆ, ಇನ್ನು ಆ ಸಮಯದಲ್ಲಿ ಅಲ್ಲಿಗೆ ಬಂದ ಬ್ರಿಗೂ ಋಷಿಯನ್ನ ವಿಷ್ಣುದೇವ ಗಮನಿಸುವುದಿಲ್ಲ, ಇನ್ನು ಇದರಿಂದ ಕೋಪಗೊಂಡ ಋಷಿ ವಿಷ್ಣುವಿನ ಎದೆಗೆ ಒದೆಯುತ್ತಾರೆ.

ಇನ್ನು ಋಷಿಗಳು ಕಾಲಿನಿಂದ ಒದ್ದರೂ ಕೂಡ ವಿಷ್ಣು ಸುಮ್ಮನಿರುತ್ತಾನೆ ಮತ್ತು ಇದನ್ನ ನೋಡಿದ ಲಕ್ಷ್ಮಿ ದೇವಿಗೆ ತುಂಬಾ ಕೋಪ ಬರುತ್ತದೆ ಮತ್ತು ಇದರಿಂದ ಲಕ್ಷ್ಮಿ ದೇವಿ ವೈಕುಂಠದಿಂದ ಹೊರಟು ಭೂಮಿಗೆ ಬರುತ್ತಾರೆ ಮತ್ತು ರಾಜನ ಮಗಳಾಗಿ ಜನಿಸುತ್ತಾರೆ. ಇನ್ನು ಲಕ್ಷ್ಮಿಯನ್ನ ಹುಡುಕುತ್ತ ವಿಷ್ಣು ವೆಂಕಟೇಶ್ವರನ ರೂಪದಲ್ಲಿ ಭೂಮಿಗೆ ಬರುತ್ತಾನೆ ಮತ್ತು ಆ ರಾಜನ ಬಳಿ ಹೋಗಿ ಮದುವೆಯ ಪ್ರಸ್ತಾಪವನ್ನ ಕೂಡ ಇಡುತ್ತಾನೆ.

ಇನ್ನು ಭೂಮಿಯ ಮೇಲೆ ಓರ್ವ ರಾಜನ ಮಗಳನ್ನ ಮದುವೆಯಾಗಲು ವಿಷ್ಣುವಿಗೆ ತುಂಬಾ ದುಡ್ಡಿನ ಅಗತ್ಯ ಇದ್ದಿತ್ತು ಮತ್ತು ಈ ಕಾರಣಕ್ಕೆ ಬ್ರಹ್ಮ ಮತ್ತು ಶಿವನ ಸಾಕ್ಷಿಯಾಗಿ ಕುಬೇರನ ಬಳಿ ಅಪಾರ ಪ್ರಮಾಣದ ಅಂದರೆ ಹದಿನಾಲ್ಕು ಲಕ್ಷ ಚಿನ್ನದ ನಾಣ್ಯವನ್ನು ಸಾಲವಾಗಿ ಪಡೆಯುತ್ತಾನೆ ಮತ್ತು ಇದನ್ನ ಈಗಲೂ ಕೂಡ ಶ್ರೀನಿವಾಸ ಕಲ್ಯಾಣ ಎಂದು ಕೆರೆಯಲಾಗುತ್ತದೆ.

ಇನ್ನು ಕುಬೇರನ ಬಳಿ ನಾನು ಕಲಿಯುಗದ ಅಂತ್ಯದ ತನಕ ನಿನ್ನ ಸಾಲವನ್ನ ಬಡ್ಡಿ ಸಮೇತವಾಗಿ ತೀರಿಸುತ್ತೇನೆ ಎಂದು ಹೇಳುತ್ತಾನೆ ವಿಷ್ಣುದೇವ ಮತ್ತು ಆ ಮಾತಿನ ಸಲುವಾಗಿ ಇಂದು ಕೂಡ ಸಾಲವನ್ನ ತೀರಿಸುತ್ತಿದ್ದಾನೆ ವೆಂಕಟರಮಣ. ಈ ಕಾರಣಕ್ಕೆ ಸಾಲಗಾರ ತಿಮ್ಮಪ್ಪ ಎಷ್ಟೇ ಹಣ ಇದ್ದರೂ ಇಂದಿಗೂ ಬಡವನಾಗೆ ಇದ್ದಾನೆ ಎಂಬ ನಂಬಿಕೆ ಇದೆ.

Leave A Reply

Your email address will not be published.

error: Content is protected !!