ಕಾರ್ತಿಕ ಮಾಸದಂದು ತುಳಸಿ ಪೂಜೆ ಮಾಡುವ ಸರಿಯಾದ ವಿಧಾನ ತಿಳಿದುಕೊಳ್ಳಿ

0

ಆತ್ಮೀಯ ಓದುಗರೇ ಹೆಣ್ಣು ಮಕ್ಕಳು ಅಂದ್ರೆ ಮನೆಯಲ್ಲಿ ನಾನಾ ರೀತಿಯ ಕೆಲಸ ಕಾರ್ಯಗಳು ಅಷ್ಟೇ ಅಲ್ಲ ಮನೆಯಲ್ಲಿ ವಿವಿಧ ರೀತಿಯ ಪೂಜೆಗಳನ್ನು ಮಾಡುತ್ತಾರೆ ಅಲ್ಲದೆ ದೇವರ ಒಲವು ಕೂಡ ಜಾಸ್ತಿಯಾಗಿರುತ್ತೆ ಕಾರ್ತಿಕ ಮಾಸ ಹಿಂದೂಗಳಿಗೆ ತುಂಬಾ ಪವಿತ್ರವಾದ ಮಾಸ. ಈ ಮಾಸದಲ್ಲಿ ಪ್ರತೀ ದಿನ ಸಂಜೆ ದೀಪ ಬೆಳಗಿ ದೇವರನ್ನು ಪೂಜಿಸಲಾಗುವುದು.

ಇನ್ನು ಕಾರ್ತಿಕ ಮಾಸ ಅನ್ನೋದು ತನ್ನದೆಯಾದ ವಿಶೇಷತೆಯನ್ನು ಹೊಂದಿದೆ ಈ ಮಾಸ ಶಿವನಿಗೆ ಮುಡುಪಾಗಿರುವುದು. ಕಾರ್ತಿಕ ಮಾಸದ ಶುದ್ಧ ದ್ವಾದಶಿ ಭಕ್ತರಿಗೆ ಮತ್ತಷ್ಟು ವಿಶೇಷವಾದ ದಿನವಾಗಿದೆ. ಈ ದಿನ ತುಳಸಿ ಹಬ್ಬವನ್ನು ಆಚರಿಸಲಾಗುವುದು. ಇದನ್ನು ಉತ್ಥಾನ ದ್ವಾದಶಿ ಎಂತಲೂ ಕರೆಯುವರು. ಉತ್ಥಾನ ಎಂದರೆ ಏಳುವುದು ಎಂದರ್ಥ. ಅಂದರೆ ಶ್ರೀಮನ್ನಾರಾಯಣನು ಪಾಲ್ಗಡಲಿನಲ್ಲಿ ತನ್ನ ಸುಖಶಯನದಿಂದ ಮೇಲೆದ್ದು ತನ್ನ ನಿದ್ರಾಮುದ್ರೆಯನ್ನು ಭಕ್ತರಿಗೆ ಸಾಕ್ಷಾತ್ಕರಿಸುವ ದಿನ.

ಈ ದಿನ ಸಂಜೆಯ ಸಮಯದಲ್ಲಿ ತುಳಸಿ ವಿವಾಹ ಏರ್ಪಡುವುದು. ಚಾಂದ್ರಮಾನ ಕಾರ್ತಿಕಮಾಸದ ಶುಕ್ಲಪಕ್ಷದ 12ನೇ ದಿನ ಅಂದರೆ ದ್ವಾದಶಿಯಂದು ವಿಷ್ಣು ಸ್ವರೂಪಿ ನೆಲ್ಲಿಕಾಯಿ ಗಿಡವನ್ನು ವರನನ್ನಾಗಿಸಿ, ವಧುವಾದ ತುಳಸಿಯ ಜೊತೆಗೆ ವಿವಾಹವನ್ನು ಮಾಡಲಾಗುತ್ತದೆ. ಪ್ರತಿ ವರ್ಷ ತುಳಸಿ ವಿವಾಹವನ್ನು ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿ ಯಂದು ಮಾಡಲಾಗುತ್ತದೆ.

ಇನ್ನು ತುಳಸಿ ಮದುವೆ ಪೂಜೆಯ ವಿಧಿ ವಿಧಾನಗಳು ಹೇಗೆಲ್ಲಾ ಇರುತ್ತವೆ ಎಂದು ನೋಡುವುದಾದರೆ , ಹಿಂದೂ ವಿವಾಹ ಪದ್ಧತಿಯಲ್ಲಿ ನಡೆಯುವ ಆಚರಣೆಯಂತೆಯೇ ವಿಷ್ಣು-ತುಳಸಿ ವಿವಾಹವನ್ನು ಭಕ್ತರು ಆಚರಿಸುತ್ತಾರೆ. ಹೆಂಗಳೆಯರು ತುಳಸಿ ಗಿಡವನ್ನು ಮದುವಣಗಿತ್ತಿಯಂತೆ ಸಿಂಗರಿಸುತ್ತಾರೆ. ವಿಷ್ಣುವಿನ ಅಥವಾ ಅವನ ಅವತಾರವಾದ ಕೃಷ್ಣ, ರಾಮನ ಫೋಟೋವನ್ನು ಇಲ್ಲವೇ ಸಾಲಿಗ್ರಾಮ ಕಲ್ಲು, ಇಲ್ಲವೇ ನೆಲ್ಲಿಕಾಯಿ ಗಿಡವನ್ನು ತುಳಸಿ ಗಿಡದ ಪಕ್ಕ ಇಟ್ಟು ಇಬ್ಬರನ್ನೂ ಸ್ನಾನ ಮಾಡಿಸಿ ಶುಭ್ರ ಬಟ್ಟೆ ತೊಡಿಸಿ ಹೂವು, ಹಣ್ಣುಗಳಿಂದ ಅಲಂಕರಿಸುತ್ತಾರೆ.

ಅಷ್ಟೇ ಅಲ್ಲದೆ ವಿಷ್ಣುವಿನ ಭಾವಚಿತ್ರ ಹಾಗೂ ತುಳಸಿ ಗಿಡಕ್ಕೆ ಹತ್ತಿಯಿಂದ ತಯಾರಿಸಿದ ಮಾಲೆಯನ್ನು ತೊಡಿಸಿ ಮದುವೆಯ ಶಾಸ್ತ್ರ ಮಾಡಲಾಗುತ್ತದೆ. ಆದರೆ ಹೇಗೆ ಬೇಕೋ ಹಾಗೆ ತುಳಸಿ ಮದುವೆ ಪೂಜೆ ಮಾಡುವ ಹಾಗಿಲ್ಲ ಅದಕ್ಕೂ ಕೆಲವು ಕ್ರಮಗಳನ್ನು ಅನುಸರಿಸಬೇಕು ಅವುಗಳು ಏನೂ ಎಂದು ನೋಡುವುದಾದರೆ, ತುಳಸಿ ವಿವಾಹ ಆಚರಣೆ ಮಾಡುವವರು ಉಪವಾಸವರಬೇಕು.

ಮನೆ ಮುಂದೆ ಇರುವ ತುಳಸಿ ಗಿಡದ ಸುತ್ತ ಮದುವೆ ಮಂಟಪ ನಿರ್ಮಿಸಿ ಅದಕ್ಕೆ ಅಲಂಕಾರ ಮಾಡಬೇಕು, ಈ ಮಂಟಪಕ್ಕೆ ಬೃಂದಾವನವೆಂದು ಹೆಸರು. ಈ ಮಂಟಪದಲ್ಲಿ ವೃಂದಾಳ ಆತ್ಮವಿದ್ದು ಮರುದಿನ ಬೆಳಗ್ಗೆ ಹೊರಟು ಹೋಗುತ್ತದೆ ಎಂಬ ನಂಬಿಕೆಯಿದೆ. ತುಳಸಿ ವಿವಾಹ ನೋಡಲು ಬಂದವರು ತುಳಸಿ ಹಾಗೂ ವಿಷ್ಣು ಫೋಟೋ ಅಥವಾ ನೆಲ್ಲಿಕಾಯಿ ಗಿಡವನ್ನು ಅಲಂಕಾರ ಮಾಡಿ ಪೂಜಿಸಿದ ಮಹಿಳೆಯರಿಗೆ ಉಡುಗೊರೆಗಳನ್ನು ನೀಡಬೇಕು.

ತುಳಸಿ ವಿವಾಹ ಹಬ್ಬದಲ್ಲಿ ಸಿಹಿತಿಂಡಿ, ಜ್ಯೂಸ್, ಹಬ್ಬದ ಅಡುಗೆಯನ್ನು ಮಾಡಿ ಬಂದವರಿಗೆ ನೀಡಲಾಗುವುದು. ಇನ್ನೂ ತುಳಸಿ ವಿವಾಹ ಪೂಜೆ ಮಾಡುವುದರಿಂದ ದೊರೆಯುವ ಪ್ರಯೋಜನಗಳು ಏನು ಅಂತ ನೋಡುವುದಾದರೆ, ಯಾವುದೇ ಮನೆಯಲ್ಲಿ ಮಕ್ಕಳ ಮದುವೆಗೆ ಏನಾದರೂ ಅಡಚರಣೆಗಳು ಇದ್ದಲ್ಲಿ ಇರುವ ಅಡೆತಡೆಗಳು ದೂರವಾಗುತ್ತದೆ, ಮನೆಗೆ ಐಶ್ಚರ್ಯ ಲಭಿಸುತ್ತದೆ ಮನೆ ಮಂದಿಗೆ ಸಂತೋಷ ಉಂಟಾಗುತ್ತದೆ, ಮನೆಯವರ ಶ್ರೇಯಸ್ಸಿಗಾಗಿ ಈ ಪೂಜೆ ಮಾಡಲಾಗುವುದು, ಮಕ್ಕಳ ಭಾಗ್ಯ ಲಭಿಸುವುದು, ಕನ್ಯಾದಾನ ಮಾಡುವ ಭಾಗ್ಯ ದೊರೆಯುವುದು.

ಹಾಗೆಯೇ ಸುಮ್ಮನೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಯಾವುದಕ್ಕೂ ಕಾರಣವಿಲ್ಲದೇ ರೀತಿ ನೀತಿ ನಿಯಮಗಳನ್ನು ಮಾಡಿಲ್ಲ ಎಲ್ಲದರ ಹಿಂದೆಯೂ ಒಂದೊಂದು ಒಳ್ಳೆಯ ಉದ್ದೇಶ ಇದ್ದೆ ಇರುತ್ತದೆ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಅಷ್ಟೇ.

Leave A Reply

Your email address will not be published.

error: Content is protected !!